ಸಾವಿತ್ರಿಬಾಯಿ ಫುಲೆ(1831-1897) ಸಾಮಾಜಿಕ ಹೋರಾಟಗಾರ್ತಿ, ಮಹಿಳಾಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ. ಆಧುನಿಕ ಶಿಕ್ಷಣದ ತಾಯಿ. ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ ಅವರು ಧರಿಸುತ್ತಿದ್ದರು.

● ಜನನ, ಜೀವನ:

ಸಾವಿತ್ರಿಬಾಯಿ ಫುಲೆ ೧೮೩೧ರಲ್ಲಿ ಮಹಾರಾಷ್ಟ್ರದ ಸತಾರಜಿಲ್ಲೆಯ 'ನೈಗಾಂನ್'ನಲ್ಲಿ ಹುಟ್ಟಿದರು. ತಂದೆ ನೇವಸೆ ಪಾಟೀಲ. ಬಾಲ್ಯದಲ್ಲಿಯೇ ಸಾವಿತ್ರಿಬಾಯಿ ಅವರು ಜ್ಯೋತಿಬಾಫುಲೆಯವರನ್ನು ಲಗ್ನವಾದರು. ಸಾವಿತ್ರಿಬಾಯಿ ಅವರ ಯಶಸ್ಸು, ಶ್ರೇಯಸ್ಸಿನ ವಿಕ್ರಮಪಾಲು ಜ್ಯೋತಿಬಾ ಫುಲೆ ಅವರದಾಗಿತ್ತು. ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾಫುಲೆ ಅವರಿಗೆ ಸಲ್ಲಬೇಕು.

● ವಿವಾಹ, ವಿದ್ಯಾಭ್ಯಾಸ:

ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಮದುವೆಯಾದಾಗ ಅವರಿಗೆ 8 ವರ್ಷ ವಯಸ್ಸು, ಜ್ಯೋತಿಬಾಫುಲೆ ಅವರಿಗೆ 13 ವರ್ಷ ವಯಸ್ಸಾಗಿತ್ತು. ಸಾವಿತ್ರಿಬಾಯಿ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು. 1847 ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಭೇತಿ ಪಡೆದರು. ಆಗ ಅವರಿಗೆ 17 ವರ್ಷ. ಹೀಗಾಗಿ ಮಹಾರಾಷ್ಟ್ರದಲ್ಲಿ ತರಬೇತಾದ ಮೊದಲ ಶಿಕ್ಷಕಿಯಾದರು.

● ಶಿಕ್ಷಕಿಯಾಗಿ:

ಸಾವಿತ್ರಿಬಾಯಿ ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿಯಾದರು. ಆ ಕಾಲದಲ್ಲಿ ಹಿಂದೂ ಸ್ರ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ. ಅವರು ಪಾಠಶಾಲೆಗೆ ಹೋರಟಾಗ ಕೆಲವರು ಕೇಕೇ ಹಾಕಿ ನಗುತ್ತಿದ್ದರು, ಅವರ ಮೇಲೆ ಕೆಸರು, ಸಗಣಿ ಎರಚಿ, ಕಲ್ಲನೂ ತೂರುತ್ತಿದ್ದರು. ಇದರಿಂದ ಧೃತಿಗೆಡದ ಸಾವಿತ್ರಿಬಾಯಿಯವರು ಯಾವಾಗಲೂ ಒಂದು ಸೀರೆಯೊಂದನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ದಾರಿಯಲ್ಲಿ ಕೆಸರು, ಸಗಣಿ ಎರಚಿಸಿಕೊಂಡಾಗ, ಬೇಸರ ಗೊಳ್ಳದೆ- ನಮ್ಮ ಮೇಲೆ ಎರಚುವ ಸೆಗಣಿ, ತೂರುವ ಕಲ್ಲುಗಳನ್ನು ಹೂಗಳೆಂದು ಪರಿಭಾವಿಸಿ, ಶಾಲೆಯಲ್ಲಿ ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿ ಇಟ್ಟುಕೊಂಡಿರುತ್ತಿದ್ದ ಮತ್ತೊಂದು ಸೀರೆಯನ್ನು ಉಟ್ಟುಕೊಂಡು ಪಾಠಕ್ಕೆ ಅಣಿಯಾಗುತ್ತಿದ್ದರು.

1848 ರಿಂದ 1852 ರ ಅವಧಿಯಲ್ಲಿ 18 ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದರು. ಈ ಪಾಠಶಾಲೆಗಳ ಆಡಳಿತದ ಜವಾಬ್ದಾರಿಯನ್ನು ಸಾವಿತ್ರಿಬಾಯಿ ನಿರ್ವಹಿಸಬೇಕಾಗಿತ್ತು. ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಮುಂತಾದ ಕೆಲಸಗಳನ್ನು ಇವರು ಸಮರ್ಪಕವಾಗಿ ನಿಭಾಯಿಸುವುದರ ಮೂಲಕ ಜ್ಯೋತಿಬಾಫುಲೆ ಅವರಿಗೆ ನೆರವಾದರು. ಬ್ರಿಟಿಷ್ ಸರ್ಕಾರದವರು ಅವರ ಕೆಲಸ ಕಾರ್ಯಗಳನ್ನು ಕೂಲಂಕುಷವಾಗಿ ಅವಲೋಕಿಸಿ ಮೆಚ್ಚುಗೆ ಸೂಚಿಸಿದ್ದರು.

● ಲೇಖಕಿಯಾಗಿ:

1854 ರಲ್ಲಿ ಸಾವಿತ್ರಿಬಾಯಿಯವರು 'ಕಾವ್ಯಫೂಲೆ'(ಕಾವ್ಯ ಅರಳಿದೆ)ಎನ್ನುವ ಕವನಸಂಕಲನವನ್ನು ಪ್ರಕಟಿಸಿದರು. ಈ ಕಾವ್ಯವು 19 ನೇ ಶತಮಾನದ ಸಮಾಜವನ್ನು ದಾಖಲಿಸುವಲ್ಲಿ ಮೈಲಿಗಲ್ಲಾಗಿದೆ. ಇವರು ಈ ಕೃತಿಯನ್ನು'ಅಭಂಗ್' ಶೈಲಿಯಲ್ಲಿ ರಚಿಸಿದ್ದಾರೆಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಕೃತಿಯಿಂದಾಗಿ ಸಾವಿತ್ರಿಬಾಯಿಯವರನ್ನು ಮರಾಠಿ ಕಾವ್ಯದ ಪ್ರವರ್ತಕಿ ಎಂದು ಕರೆಯಲಾಗಿದೆ. ಅವರ ಎರಡನೇಯ ಕೃತಿ 'ಭವನಕಾಶಿ ಸುಬೋಧ ರತ್ನಾಕರ್'(ಅಪ್ಪಟ ಮುತ್ತುಗಳ ಸಾಗರ) 1891 ರಲ್ಲಿ ಪ್ರಕಟವಾಯಿತು. ಇದು ಜ್ಯೋತಿಬಾ ಅವರನ್ನು ಒಳಗೊಂಡಂತೆ ಬರೆದ ಒಂದು ಬಯೋಗ್ರಫಿ. ಮೂರನೆಯದು ಜ್ಯೋತಿಬಾ ಅವರ ಭಾಷಣಗಳ ಸಂಪಾದಿತ ಕೃತಿಯನ್ನು 1892 ರಲ್ಲಿ ಸಂಪಾದಿಸಲಾಯಿತು. ನಾಲ್ಕನೇ ಕೃತಿ- ಕರ್ಜೆ(ಸಾಲ) ಎಂಬುದಾಗಿದೆ. ಸಾಮಾಜಿಕ ಕಳಕಳಿಯುಳ್ಳ ಕೃತಿಗಳು ಇವಾಗಿವೆ.

ಕೃತಿಗಳು:

● ಕವನಸಂಕಲನ-ಕಾವ್ಯಫೂಲೆ (ಕಾವ್ಯ ಅರಳಿದೆ)-೧೮೫೪.

● ಆತ್ಮಕಥೆ-ಭವನಕಾಶಿ ಸುಬೋಧ ರತ್ನಾಕರ್

  (ಅಪ್ಪಟ ಮುತ್ತುಗಳ ಸಾಗರ)-೧೮೯೧

● ಸಂಪಾದಿತ ಕೃತಿ-ಜ್ಯೋತಿಬಾ ಅವರ ಭಾಷಣಗಳು -೧೮೯೨.

● ಪ್ರಬಂಧ-ಕರ್ಜೆ(ಸಾಲ).

● ಆದರ್ಶ ಪತ್ನಿಯಾಗಿ:

ಜ್ಯೋತಿಬಾ ಅವರ ತತ್ವ್ತ ಮತ್ತು ಪ್ರಗತಿಪರ ದೃಷ್ಟಿಕೋನವನ್ನು ತಮ್ಮದಾಗಿಸಿಕೊಳ್ಳುವ ಸಾವಿತ್ರಿಬಾಯಿಯವರು ಜೀವಮಾನವಿಡೀ ಪತಿಯೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಿಲ್ಲುತ್ತಾರೆ. ಇವರಿಬ್ಬರ ನಡುವೆ ಒಂದು ಮಧುರವಾದ ಬಾಂಧವ್ಯ ಮತ್ತು ವೈಯಕ್ತಿಕ ಭಾವನೆಗಳನ್ನು ಗೌರವಿಸಿಕೊಳ್ಳುವ ಗುಣವಿತ್ತು. ಅವರಿಗೆ ಮಕ್ಕಳಿರದಿದ್ದರು ಸಂತೋಷವಾಗಿದ್ದರು. ಪತ್ನೀಯ ಮೇಲೆ ಅಗಾಧ ಪ್ರೀತಿ ಹೊಂದಿದ್ದ ಜ್ಯೋತಿಬಾ ಫುಲೆ ಅವರು ಮಕ್ಕಳಿಗಾಗಿ ಮರುಮದುವೆಯಾಗಲಿಲ್ಲ. ಮುಂದೆ ಫುಲೆ ದಂಪತಿಗಳು ೧೮೭೪ರಲ್ಲಿ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತು ತೆಗೆದುಕೊಂಡು, ಆತ ಸಮಾಜದಲ್ಲಿ ಸತ್ಪ್ರಜೆಯಾಗುವ ಅವಕಾಶವನ್ನು ಕಲ್ಪಿಸುತ್ತಾರೆ. 1863 ರಲ್ಲಿ ಅನಾಥ ಮಕ್ಕಳಿಗಾಗಿ ಶಿಶುಕೇಂದ್ರವನ್ನು ತೆರೆಯುತ್ತಾರೆ. ಆ ಅನಾಥ ಮಕ್ಕಳೊಂದಿಗೆ ಪ್ರಾಂಜಲ ಮನಸ್ಸಿನಿಂದ ಬೆರೆಯುತ್ತಾರೆ.

ಸಾಮಾಜಿಕ ಕ್ರಾಂತಿಕಾರಿಯಾಗಿ ಶಿಕ್ಷಣದ ಹಕ್ಕು, ಸರ್ವಶಿಕ್ಷಣ ಅಭಿಯಾನ ಬಿಸಿಯೂಟದ ಯೋಜನೆಗಳನ್ನು ಕ್ರಾಂತಿಕಾರಿ ಯೋಜನೆಗಳೆಂದು ಕೊಂಡಾಡಲಾಗುತ್ತಿದೆ. 150 ವರ್ಷಗಳ ಹಿಂದೆಯೇ ಸಾವಿತ್ತಿಬಾಯಿ ಶಾಲೆಯನ್ನು ತೊರೆಯದ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಯೋಜನೆ ತಂದಿದ್ದರು. ಶಿಕ್ಷಣದಲ್ಲಿ ವೈವಿಧ್ಯತೆ ತಂದಿದ್ದರು. 1860 ರ ದಶಕದಲ್ಲಿ ವಿಧವೆಯರ ತಲೆಬೋಳಿಸುವ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು. ವಿಧವೆಯರಿಗೆ, ವಿವಾಹಬಾಹಿರವಾಗಿ ಗರ್ಭಿಣಿಯರಾಗುವ ಮಹಿಳೆಯರಿಗಾಗಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದರು. ವಿವಾಹಬಾಹಿರ ಸಂಬಂಧದಿಂದ ಹುಟ್ಟಿದ ಮಕ್ಕಳಿಗಾಗಿ ಭಿನ್ನವಾದ ಶಿಶುಕೇಂದ್ರಗಳನ್ನು ಸ್ಥಾಪಿಸಿದರು. ಈ ಬಗೆಯ ಸಾಮಾಜಿಕ ಸಂಘಟನೆಗಳ ಮೂಲಕ ನೂರಾರು ಮಹಿಳೆಯರ ಮತ್ತು ಮಕ್ಕಳ ಬದುಕಿಗೊಂದು ನೆಲೆ ಕೊಟ್ಟರು. ಸಾವಿತ್ರಿಬಾಯಿ 'ಸತ್ಯೋಧಕ' ಸಮಾಜದ ಅಧ್ಯಕ್ಷೆಯಾಗಿದ್ದರು.

19 ನೇ ಶತಮಾನದ ಇತಿಹಾಸದಲ್ಲಿ ಹಿಂದೂ ಧಾರ್ಮಿಕ ಮದುವೆಗಳನ್ನು ಪೂಜಾರಿಗಳಿಲ್ಲದೆ ನೆರವೇರಿಸಿದ್ದುದು ಒಂದು ಕ್ರಾಂತಿಕಾರಿ ಹೋರಾಟವಾಗಿದೆ. ಈ ಸಂದರ್ಭದಲ್ಲಿ ಬ್ರಾಹ್ಮಣರ ಅಧಿಪತ್ಯವಿಲ್ಲದ ಮದುವೆಗಳನ್ನು ಏರ್ಪಡಿಸಿದ್ದರು. ಅಲ್ಲದೆ ಮೊಟ್ಟ ಮೊದಲ ಬಾರಿ ಕಾನೂನಿನ ನೆರವನ್ನು ಪಡೆದು ಮದುವೆ ನೆರವೇರಿಸಿದ್ದು ಇಂದಿಗೂ ಇತಿಹಾಸದಲ್ಲಿ ದಾಖಲಾಗದೆ ಉಳಿದಿರುವ ಸಂಗತಿ. ಬದಲಾವಣೆಯ ಹರಿಕಾರರಾಗಿ ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳುವಳಿ ಸಂಘಟನೆಗಳನ್ನು ಸಂಘಟಿಸಿದರು.

1848 ರಲ್ಲಿ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸೇರಿ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. 1855 ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿಪಾಳೆಯದ ಶಾಲೆ ಸ್ಥಾಪನೆ. 1868 ರಲ್ಲಿ ದಲಿತರಿಗಾಗಿ ಮನೆಯ ಕುಡಿಯುವ ನೀರಿನ ಟ್ಯಾಂಕನ್ನು ಬಿಟ್ಟುಕೊಟ್ಟರು. ಬ್ರಾಹ್ಮಣ ವಿಧವೆಯ ಮಗುವೊಂದನ್ನು ದತ್ತು ತೆಗೆದುಕೊಂಡುದು. ಪಶ್ಚಿಮ ಮಹಾರಾಷ್ಟ್ರದ ಕ್ಷಾಮ ಪ್ರದೇಶಗಳಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದುದು.

● ಪ್ರಶಸ್ತಿ, ಗೌರವ

ಶಿಕ್ಷಣ ಕೇತ್ರದಲ್ಲಿನ ಸಾಧನೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಫುಲೆ ದಂಪತಿಗಳಿಗೆ ಸನ್ಮಾನ. ಗಣ್ಯರ ದೃಷ್ಠಿಯಲ್ಲಿ ಸಾವಿತ್ರಿಬಾಯಿ ಫುಲೆ ಥಾಮ್ ವುಲ್ಫ್ ಮತ್ತು ಸುಜನ ಆಂಡ್ರಡೆ - ಸಾವಿರಾರು ದೀಪಗಳನ್ನು ಹಚ್ಚಿದ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆಗೆ ನೀನು ಚಿರಋಣಿಯಾಗಿರಬೇಕು. ಇಂದಿನ ಅಕ್ಷರಸ್ಥ ಭಾರತೀಯ ಪ್ರತಿಯೊಬ್ಬ ಮಹಿಳೆಯ ಮನದಲ್ಲೂ ಸಾವಿತ್ರಿಬಾಯಿ ಫುಲೆ ಇದ್ದಾರೆ. ಮುಖೇಶ್ ಮಾನಸ್ - ಶಿಕ್ಷಣದ ಕ್ಷೇತ್ರಕ್ಕೆ ಯಾವ ಬಗೆಯ ಕಾಣಿಕೆಯನ್ನೂ ನೀಡದಂತಹ ವಿದ್ವಾಂಸರ ಹೆಸರಿನಲ್ಲಿ ಇಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿ, ಕ್ರಾಂತಿಕಾರಿ ಚಳುವಳಿ ಮಾಡಿದ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ ? ಮೃದುವರ್ಮ - 150 ವರ್ಷಗಳ ಹಿಂದೆ ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ ಅದನ್ನು ನನಸಾಗಿಸಲು ಸಾವಿತ್ರಿಬಾಯಿ ಫುಲೆ ಶ್ರಮಿಸಿದ್ದಾರೆ.

● ನಿಧನ:

1897 ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ಸಾವಿತ್ರಿಬಾಯಿ ಫುಲೆ ಅವರೇ ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ತೀರಿಕೊಂಡರು.